ಕಲಾಂ ಪಯಣ… ಭೂಮಿಯಿಂದ ಭಾನುವರೆಗೆ..
ಭಾರತದ ಇತಿಹಾಸದಲ್ಲಿ ಅತ್ಯಂತ ಜನಪ್ರಿಯ ರಾಷ್ಟ್ರಪತಿ ಎನಿಸಿದ್ದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಹುಟ್ಟಿದ್ದು 1931ರ ಅಕ್ಟೋಬರ್ 15ರಂದು. ಈಗ ತಮಿಳು ನಾಡಿಗೆ ಸೇರಿದ ಸಣ್ಣ ಕರಾವಳಿ ಪಟ್ಟಣದಲ್ಲಿ. ದೇಶದ ಅತ್ಯುನ್ನತ ಸಂವಿಧಾನಾತ್ಮಕ ಹುದ್ದೆಯನ್ನು ಅಲಂಕರಿಸುವ ಮೊದಲು ಅವರು ಬಾಹ್ಯಾಕಾಶ ಎಂಜಿನಿಯರ್ ಆಗಿ, ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸಿದ್ದರು. ಭಾರತದ ಕ್ಷಿಪಣಿ ತಯಾರಿಕಾ ಯೋಜನೆಯಲ್ಲಿ ಸಕ್ರಿಯ ವಾಗಿ ತೊಡಗಿಸಿಕೊಂಡವರು. 2007ರಲ್ಲೇ ಅವರ ರಾಷ್ಟ್ರಪತಿ ಅಧಿಕಾರಾವಧಿ ಮುಗಿದ ರೂ, ಶಾಲಾಮಕ್ಕಳು ಹಾಗೂ ಕಾಲೇಜು ವಿದ್ಯಾರ್ಥಿಗಳ ಜತೆ ಸಾವಿರಾರು ಸಂವಾದಗಳನ್ನು ನಡೆಸುವ ಮೂಲಕ ಅವರು ದೇಶದ ಉದ್ದಗಲ ಕ್ಕೂ ಜನಪ್ರಿಯತೆ ಗಳಿಸಿದ್ದರು. ಜನರ ರಾಷ್ಟ್ರ ಪತಿ, ಭಾರತದ ಕ್ಷಿಪಣಿ ಮನುಷ್ಯ ಎಂದು ಅವರು ಜನಜನಿತರಾಗಿದ್ದರು.
ಅವೂಲ್ ಫಕೀರ್ ಝೈನುಲ್ ಆಬಿದೀನ್ ಅಬ್ದುಲ್ ಕಲಾಂ ಅವರ ತಂದೆ. ಝೈನುಲ್ ಆಬಿದೀನ್ ತಮಿಳುನಾಡಿನ ಯಾತ್ರಾ ಸ್ಥಳವಾದ ರಾಮೇಶ್ವರಂನಲ್ಲಿ ದೋಣಿ ತಯಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದವರು. ಈ ತಮಿಳು ಮುಸ್ಲಿಮ್ ಕುಟುಂಬಕ್ಕೆ ಸೇರಿದ ಅವರಿಗೆ ಆರ್ಥಿಕ ಮುಗ್ಗಟ್ಟು ಇದ್ದುದರಿಂದ ಬಾಲ್ಯದಲ್ಲೇ ಪತ್ರಿಕೆ ಹಂಚುತ್ತಿದ್ದರು.
ನನ್ನ ಉತ್ಸಾಹಕ್ಕೆ ಯಾವ ಇತಿಮಿತಿಯೂ ಇರಲಿಲ್ಲ. ‘ನಾನು ಎಂಟು ವರ್ಷದವನಾಗಿದ್ದಾಗಲೇ, ನನ್ನ ಕುಟುಂಬದ ಆದಾಯಕ್ಕೆ ನಾನು ಅರ್ಥಪೂರ್ಣ ಕೊಡುಗೆ ನೀಡುತ್ತಿದ್ದೆ. ನನ್ನ ಹೊಸ ಕೆಲಸ ನನ್ನ ಜೀವನದ ಅವಿಭಾಜ್ಯ ಅಂಗವಾಗಿತ್ತು’ ಎಂದು 2013ರಲ್ಲಿ ಬಿಡುಗಡೆಯಾದ ಆತ್ಮಚರಿತ್ರೆಯಲ್ಲಿ ಅವರು ನೆನಪಿಸಿಕೊಂಡಿದ್ದರು. ‘ನನ್ನ ಅಧ್ಯಯನ ಮತ್ತು ಶಾಲೆ ಹಿಂದಿನಂತೆಯೇ ಸಾಗಿತ್ತು. ಇತರ ಎಲ್ಲ ಚಟುವಟಿಕೆಗಳನ್ನು ಪತ್ರಿಕಾ ವಿತರಣೆಯ ಜತೆಗೆ ಹೊಂದಿಸಿಕೊಳ್ಳಲಾಗುತ್ತಿತ್ತು. ಅದಾಗ್ಯೂ ತಂದೆ ಝೈನುಲ್ ಆಬಿದೀನ್ ದೋಣಿ ಸೇವೆ ಆರಂಭಿಸಿದಾಗ ಕುಟುಂಬದ ಆರ್ಥಿಕ ಸ್ಥಿತಿಗತಿ ಉತ್ತಮಗೊಂಡಿತು’ ಎಂದು ವಿವರಿಸಿದ್ದಾರೆ.
‘ತಂದೆ ಒಬ್ಬರೇ ದೋಣಿ ನಿರ್ಮಿಸುವ ಕೌತುಕವನ್ನು ನೋಡಿದ ಕಲಾಂ ಅವರ ಮನಸ್ಸಿನಲ್ಲೂ ಎಂಜಿನಿಯರ್ ಆಗಬೇಕು ಎಂಬ ಸುಪ್ತ ಬಯಕೆ ಮೂಡಿತು. ಅದೇ ಅವರ ಪ್ರಾಯೋಗಿಕ ಎಂಜಿನಿಯರಿಂಗ್ಗೆ ಸ್ಫೂರ್ತಿಯಾಯಿತು. ಪ್ರತಿ ದಿನವೂ ದೋಣಿ ನಿರ್ದಿಷ್ಟ ರೂಪ ಪಡೆಯುವುದನ್ನು ನಾನು ತಾಳ್ಮೆಯಿಂದ ನೋಡುತ್ತಿದ್ದೆ. ನಿಧಾನವಾಗಿ ತಳಭಾಗ, ನಂತರ ಬದಿಗಳು ಹಾಗೂ ಮದ್ಯಭಾಗ ನಮ್ಮ ಕಣ್ಣ ಮುಂದೆಯೇ ರೂಪು ಪಡೆಯುತ್ತಿತ್ತು ಎಂದು ಆತ್ಮಚರಿತ್ರೆಯಲ್ಲಿ ವಿವರಿಸಿದ್ದಾರೆ. ಬಹಳ ವರ್ಷಗಳ ಬಳಿಕ ನನ್ನ ಕೆಲಸ ದಲ್ಲಿ ನಾನು ಹೇಗೆ ರಾಕೆಟ್ ಹಾಗೂ ಕ್ಷಿಪಣಿಗಳನ್ನು ತಯಾರಿಸುವುದು ಎನ್ನುವುದನ್ನು ಕಲಿತೆ. ಆದರೆ ಆ ನಾವೆಗಳು ಸಮುದ್ರ ಕಿನಾರೆಗೆ ಬರುತ್ತಿದ್ದಾಗ ಯಾತ್ರಾರ್ಥಿಗಳನ್ನು ಮತ್ತು ಮೀನುಗಾರರನ್ನು ಕರೆತರುತ್ತಿತ್ತು. ಅದು ಬದುಕಿನಲ್ಲಿ ಪ್ರಮುಖ ಸ್ಮರಣೀಯ ಘಟನೆ ಅಲ್ಲ ಎಂದುಹೇಳಲು ಹೇಗೆ ಸಾಧ್ಯವಾದೀತು?
ಹತ್ತು ವರ್ಷದವರಿದ್ದಾಗ ಕಲಿತ ಪಾಠವನ್ನು ಕಲಾಂ ಎಂದೂ ಮರೆಯಲಿಲ್ಲ. ಅವರ ಶಿಕ್ಷಕ ಸುಬ್ರಹ್ಮಣ್ಯಂ ಅಯ್ಯರ್, ಸೀಗಲ್ ಹಕ್ಕಿಗಳು ಹೇಗೆ ಹಾರುತ್ತವೆ ಎನ್ನುವುದನ್ನು ವಿವರಿಸುತ್ತಿದ್ದರು. ಪುಟ್ಟ ಕಲಾಂ ತಲೆಯಲ್ಲಿ ಕೋಟಿ ಕೋಟಿ ಸಂದೇಹಗಳು ಉದ್ಭವಿ ಸುತ್ತಿದ್ದವು. ಇವುಗಳಲ್ಲಿ ಬಹಳಷ್ಟು ಸಂದೇಹಗಳಿಗೆ ಅಯ್ಯರ್ ಪರಿಹಾರಗಳನ್ನು ನೀಡಿದ್ದರು. ಅವರು ಮಕ್ಕಳನ್ನು ಸಮುದ್ರದ ಕಿನಾರೆಗೆ ಕರೆದೊಯ್ದು ಆ ಹಕ್ಕಿಗಳ ಹಾರಾಟವನ್ನು ತೋರಿಸುತ್ತಿದ್ದರು. ಪ್ರತೀ ಚಲನ ವಲನ ಹಾಗೂ ಕ್ಷಣಗಳನ್ನು ಮಕ್ಕಳಿಗೆ ವರ್ಣಿಸುತ್ತಿದ್ದರು. ಅಯ್ಯರ್ ಹೇಳುತ್ತಿದ್ದುದನ್ನು ನಾನು ಮೂಕವಿಸ್ಮಿತನಾಗಿ ಕೇಳುತ್ತಿದ್ದೆ. ಹಕ್ಕಿಗಳ ಹಾರಾಟದ ಬಗ್ಗೆ ನನಗೆ ಬೋಧನೆ ಮಾಡುತ್ತಿದ್ದ ಆ ವ್ಯಕ್ತಿಯೇ ನನ್ನ ಬದುಕಿನ ಗುರಿಯ ಕಡೆಗೆ ಹಾರಲು ನೆರವಾದರು ಎಂದು ಕಲಾಂ ಸ್ಮರಿಸಿಕೊಂಡಿದ್ದರು.
ಶಾಲಾ ಶಿಕ್ಷಣ ಮುಗಿದ ಬಳಿಕ ಅವರು 1954ರಲ್ಲಿ ತಿರುಚಿನಾಪಳ್ಳಿಯ ಸಂತ ಜೋಸೆಫ್ ಕಾಲೇಜಿನಲ್ಲಿ ಭೌತಶಾಸ್ತ್ರ ಪದವಿ ಪಡೆದರು. ಮರುವರ್ಷ ಮದ್ರಾಸ್ನಲ್ಲಿ ಬಾಹ್ಯಾಕಾಶ ಎಂಜಿನಿಯರಿಂಗ್ ಶಿಕ್ಷಣ ಪಡೆದರು. ಯುದ್ಧವಿಮಾನದಲ್ಲಿ ಪೈಲಟ್ ಆಗುವುದು ಅವರ ಗುರಿಯಾಗಿತ್ತು; ಆದರೆ ಅದು ಈಡೇರಲಿಲ್ಲ.
ಮದ್ರಾಸ್ ಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲಜಿಯಲ್ಲಿ ಪದವಿ ಪಡೆದ ಬಳಿಕ ಕಲಾಂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ ಸೇಕರಿಸಿದರು. ಭಾರತ ವಿಜ್ಞಾನ ಕ್ಷೇತ್ರದ ದಂತಕಥೆ ಎನಿಸಿದ್ದ ವಿಕ್ರಂ ಸಾರಾಬಾಯ್ ಅವರ ಅಧೀನದಲ್ಲಿ ಕಾರ್ಯ ನಿರ್ವಹಿಸಿದರು. ಭಾರತದ ಪ್ರಪ್ರಥಮ ಸ್ವದೇಶಿ ನಿರ್ಮಿತ ಉಪಗ್ರಹ ಉಡಾವಣಾ ವಾಹಕ ಎಸ್ಎನ್ವಿ-3 ಯೋಜನೆಯ ನಿರ್ದೇಶಕರಾಗಿ ಕಲಾಂ ಕಾರ್ಯ ನಿರ್ವಹಿಸಿದರು.
ಇಂದಿರಾಗಾಂಧಿಯವರು ಭಾರತದ ಪ್ರಧಾನಿಯಾಗಿದ್ದಾಗ ರಾಜಸ್ಥಾನದ ಪೊಖ್ರಾನ್ನಲ್ಲಿ ನಡೆದ ಭಾರತದ ಮೊಟ್ಟಮೊದಲ ಅಣ್ವಸ್ತ್ರ ಪರೀಕ್ಷೆಯ ಪರೀಕ್ಷಾರ್ಥ ಪ್ರಯೋಗದಲ್ಲಿ ನೇರವಾಗಿ ಇವರು ಭಾಗಿಯಾಗದಿದ್ದರೂ, ಈ ಪ್ರಯೋಗಕ್ಕೆ ಅವರನ್ನು ಆಹ್ವಾನಿಸಲಾಗಿತ್ತು. 1970ರ ದಶಕದಲ್ಲಿ ಕಲಾಂ ಪ್ರಾಜೆಕ್ಟ್ ಡೆವಿಲ್ ಮತ್ತು ಪ್ರಾಜೆಕ್ಟ್ ವಲಿಂಟರ್ನ ನೇತೃತ್ವ ವಹಿಸಿದ್ದರು. ಸ್ವದೇಶಿ ತಂತ್ರಜ್ಞಾನವನ್ನು ಬಳಸಿಕೊಂಡು ಸಿಡಿತಲೆ ಕ್ಷಿಪಣಿ ಸಿದ್ಧಪಡಿಸುವ ಯೋಜನೆ ಅದಾಗಿತ್ತು. ಈ ರಹಸ್ಯ ಯೋಜನೆಗಳ ಯಶಸ್ಸಿನ ಬಗ್ಗೆ ಸಮ್ಮಿಶ್ರ ಅಭಿಪ್ರಾಯಗಳು ಇವೆ. 1980ರ ದಶಕದಲ್ಲಿ ಭಾರತ ಸರಕಾರ ಅತ್ಯಾಧುನಿಕ ಕ್ಷಿಪಣಿ ಯೋಜನೆಯನ್ನು ಆರಂಭಿಸಿತು. ಈ ಕಾರ್ಯಕ್ರಮದ ನೇತೃತ್ವದಲ್ಲಿ ಕಲಾಂ ಹಾಗೂ ಆಗ ರಕ್ಷಣಾ ಸಚಿವಾಲಯಕ್ಕೆ ವೈಜ್ಞಾನಿಕ ಸಲಹೆಗಾರರಾಗಿದ್ದ ವಿ.ಎಸ್.ಅರುಣಾಚಲಂ ವಹಿಸಿದ್ದರು. ಸಮಗ್ರ ನಿರ್ದೇಶಿತ ಕ್ಷಿಪಣಿ ಅಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಲಾಂ ಕಾರ್ಯ ನಿರ್ವಹಿಸಿದರು. ಈ ಯೋಜನೆಯಡಿ ಮಧ್ಯಂತರಗಾಮಿ ದೂರದ ಸಿಡಿತಲೆ ಕ್ಷಿಪಣಿ ಅಗ್ನಿ ಮತ್ತು ನೆಲದಿಂದ ನೆಲಕ್ಕೆ ಹಾರುವ ಪೃಥ್ವಿ ಕ್ಷಿಪಣಿಗಳನ್ನು ನಿರ್ಮಿಸಲಾಯಿತು.
ಅಗ್ನಿ ಕ್ಷಿಪಣಿಯನ್ನು ವಿದೇಶಿ ನೆರವಿನಿಂದ ನಿರ್ಮಿಸಲಾಗಿದೆ ಎಂಬ ಆರೋಪವನ್ನೂ ಅವರು ಮುಂದೆ ಎದುರಿಸಬೇಕಾಯಿತು. ಆದರೆ ಅಂಥ ವರದಿಗಳನ್ನು ಅವರು ತೀರಾ ಲಘುವಾಗಿ ಪರಿಗಣಿಸಿದ್ದರು. ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶ ಹಿಂದುಳಿದರೆ ಅದು ದೇಶಕ್ಕೆ ಅಪಾಯ. ಈ ಹಿನ್ನೆಲೆಯಲ್ಲಿ ದೇಶದ ಮುಖಂಡತ್ವ ವಹಿಸಿದವರು ಮತ್ತು ವಿಜ್ಞಾನಿ ಸಮುದಾಯ ದೇಶಕ್ಕೆ ಅಗತ್ಯ ಭದ್ರತೆ ಹಾಗೂ ಸಮಗ್ರತೆಯನ್ನು ತಂದುಕೊಡಲು ಶ್ರಮಿಸಬೇಕು ಎನ್ನುವುದು ಅವರ ಪ್ರತಿಪಾದನೆಯಾಗಿತ್ತು. ಅಗ್ನಿ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಿದ ಬಳಿಕ ಕ್ಷಿಪಣಿ ತಂತ್ರಜ್ಞಾನದಲ್ಲಿ ಭಾರತ ಅಗ್ರಗಣ್ಯ ದೇಶಗಳ ಸಾಲಿಗೆ ಸೇರಿತು. ಯಾವುದೇ ಬಗೆಯ ಯುದ್ಧವನ್ನು ತಡೆಯುವ ಸಾಮರ್ಥ್ಯವನ್ನು ಗಳಿಸಿಕೊಂಡಿತು.
ಮೊದಲ ಗಲ್ಫ್ ಯುದ್ಧದಲ್ಲಿ ಅಮೆರಿಕ ನೇತೃತ್ವದ ಮಿತ್ರಪಡೆ ತಂತ್ರಜ್ಞಾನದಲ್ಲಿ ಮೇಲುಗೈ ಸಾಧಿಸಿದ್ದ ಹಿನ್ನೆಲೆಯಲ್ಲಿ ಜಯ ಸಾಧಿಸಿತು. ಇದನ್ನೇ ಉದಾಹರಣೆಯಾಗಿಟ್ಟುಕೊಂಡು ಕಲಾಂ ಅವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯ ಮತ್ತು ಸಂಶೋಧನಾ ಕೇಂದ್ರದಲ್ಲಿ 500 ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿ, ಭಾರತದ ತಂತ್ರಜ್ಞಾನ ಯಾವ ಮಟ್ಟದಲ್ಲಿ ಇರಬೇಕು ಎನ್ನುವುದನ್ನು ಬೋಧಿಸಿದ್ದರು. ಆ ಕ್ಷಣದಲ್ಲೇ ವಿಜ್ಞಾನಿಗಳಲ್ಲಿ ಒಂದು ಒಮ್ಮತದ ನಿರ್ಧಾರ ಒಡಮೂಡಿತು. ಮಿಲಿಟರಿ ಸಾಮರ್ಥ್ಯದಲ್ಲಿ ಅಸಮಾನತೆಯನ್ನು ನಿವಾರಿಸದೇ ಯಾವ ಅನ್ಯಮಾರ್ಗವೂ ಇಲ್ಲ. ಸಂಭಾವ್ಯ ವಿರೋಧಿಗಳಷ್ಟೇ ಸಾಮರ್ಥ್ಯವನ್ನು ಕೆಲ ಕ್ಷೇತ್ರಗಳಲ್ಲಾದರೂ ಹೊಂದಿರಬೇಕು ಎಂಬ ಒಮ್ಮತದ ನಿಲುವನ್ನು ವಿಜ್ಞಾನಿಗಳು ಪ್ರಕಟಿಸಿದರು ಎಂದು ಕಲಾಂ ತಮ್ಮ ‘ವಿಂಗ್ಸ್ ಆಪ್ ಪೈರ್’ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.
ಕಲಾಂ ಅವರು 1992ರ ಜುಲೈ ತಿಂಗಳಿಂದ 1999ರ ಡಿಸೆಂಬರ್ವರೆಗೆ ಕಲಾಂ ಅವರು ದೇಶದ ಪ್ರಧಾನಮಂತ್ರಿಯ ಮುಖ್ಯ ವೈಜ್ಞಾನಿಕ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದರು. ಜೊತೆಗೆ ಡಿಆರ್ಡಿಓ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದರು. ಈ ಅವಧಿಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಸರಕಾರ ಪೊಖ್ರಾನ್-2 ಅಣ್ವಸ್ತ್ರ ಪರೀಕ್ಷೆಯನ್ನು ನಡೆಸಿತು.
2002ರಲ್ಲಿ ಎನ್ಡಿಎ ಸರಕಾರ ಕಲಾಂ ಅವರು ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯಾಗಿ ಘೋಷಿಸಿತು. ಇವರ ಉಮೇದುವಾರಿಕೆಗೆ ಸಮಾಜವಾದಿ ಪಕ್ಷ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಕೂಡಾ ಬೆಂಬಲ ಘೋಷಿಸಿದವು. ಈ ಹಿನ್ನೆಲೆಯಲ್ಲಿ ಅಂದಿನ ರಾಷ್ಟ್ರಪತಿಯಾಗಿದ್ದ ಕೆ.ಆರ್. ನಾರಾಯಣನ್ ಮುಂದಿನ ಅವಧಿಗೆ ಅಧಿಕಾರದಲ್ಲಿ ಮುಂದುವರಿಯದಿರಲು ನಿರ್ಧರಿಸಿದರು. ಈ ಕಾರಣದಿಂದ ಕಲಾಂ ಸುಲಭವಾಗಿ ಚುನಾವಣೆಯಲ್ಲಿ ಜಯ ಸಾಧಿಸಿ ದೇಶದ ಹನ್ನೊಂದನೆ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡರು. ಹಲವು ಡಾಕ್ಟರೇಟ್ ಪದವಿಗಳನ್ನು ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಕಲಾಂ ಪಡೆದಿದ್ದರು. 1981ರಲ್ಲಿ ಪದ್ಮಭೂಷಣ ಹಾಗೂ 1990ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಗೌರವಕ್ಕೂ ಅವರು ಪಾತ್ರರಾದರು. 1998ರಲ್ಲಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿಗೆ ಬಾಜನರಾದರು.
ಒಬ್ಬ ನಾವೆ ನಿರ್ಮಾಣ ಕಾರ್ಮಿಕನ ಮಗನಾಗಿ ಹುಟ್ಟಿ, ದೇಶದ ಅತ್ಯುಚ್ಚ ಹುದ್ದೆಗೆ ಏರಿದ ಕಲಾಂ ಅವರ ಜೀವನ ಪಯಣ ನಂಬಲಸಾಧ್ಯ. ಅವರು ರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸಿದ ಬಳಿಕವೂ ಈ ಪಯಣ ಮುಂದುವರಿಯಿತು ಎನ್ನುವುದನ್ನು ಅವರು ತಮ್ಮದೇ ಶಬ್ದದಲ್ಲಿ ವಿವರಿಸಿದ್ದಾರೆ. ನನ್ನ ಜೀವನ ಇತರರಿಗೆ ಮಾದರಿ ಎನ್ನುವಷ್ಟು ದುರಂಹಕಾರಿ ನಾನಲ್ಲ. ಆದರೆ ತೀರಾ ಕಠಿಣ ಪರಿಸ್ಥಿತಿಯಲ್ಲಿ, ಯಾವ ಸೌಲಭ್ಯಗಳೂ ಇಲ್ಲದ ಸಮಾಜ ವ್ಯವಸ್ಥೆಯಲ್ಲಿ ಬದುಕುತ್ತಿರುವ ಒಬ್ಬ ಬಡ ಹುಡುಗ ನನ್ನ ಭವಿಷ್ಯ ರೂಪುಗೊಂಡ ವಿಧಾನವನ್ನು ನೋಡಿ ಸ್ಪಲ್ಪಮಟ್ಟಿಗಾದರೂ ಸಾಂತ್ವನ ಪಡೆಯಬಹುದು
Click here to read more...
Comments
Post a Comment